05 August 2010

ಏಕಮುಖ ನಿಲುವುಗಳು ಅಪಾಯವಲ್ಲವೇ?

ಸಿಬಿಐ ಟ್ರಿಗರ್ ಹಿಡಿದವರ್ಯಾರು? ಗುರಿಯಾರತ್ತ? ಎಂಬ ಡಾ ಹಿಲ್ಡಾ ರಾಜರ ಲೇಖನ ೩ ಆಗಷ್ಟ್ ೨೦೧೦ರ ವಿಜಯ ಕರ್ನಾಟಕದ ಮುಖಾಮುಖಿ ಪುಟದಲ್ಲಿ ಪ್ರಕಟವಾಗಿದೆ.ಈ ಲೇಖನದಲ್ಲಿ ಲೇಖಕಿ ಗಂಭೀರವಾದ ಆಕ್ಷೇಪಗಳನ್ನು ಸಾರ್ವತ್ರಿಕವಾಗಿ ಎತ್ತಬಹುದಾಗಿತ್ತದರೂ ತೀರ ವಯಕ್ತಿಕ ಮಟ್ಟದಲ್ಲಿ ಎತ್ತಿ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಅದೆಷ್ಟೇ ಕೆಳಕ್ಕಿಳಿದಾದರೂ ಸಮರ್ಥಿಸಿಕೊಳ್ಳುವ ಹಟಕ್ಕೆ ಬಿದ್ದಿದ್ದರೆ ಅನ್ನಿಸುತ್ತಿದೆ,ಹೀಗಾಗಿ ಈ ಲೇಖನ.



ಮೊದಲಿಗೆ ವಾದ ಮಂಡಿಸುವ ಹುಮ್ಮಸ್ಸಿನಲ್ಲಿ ಮೋದಿ ಒಬ್ಬ ಅಪ್ಪಟ ರಾಜಕಾರಣಿ ಅನ್ನೋದನ್ನ ಮರೆಯದಿರೋಣ,ಪ್ರಜಾಪ್ರಭುತ್ವದ ಆಶಯದ ಪ್ರಕಾರ ಅಧಿಕಾರಶಾಹಿ ಕಾರ್ಯಾಂಗ ಪ್ರಜೆಗಳ ಹಣ ಹಾಗು ಸ್ವತ್ತನ್ನ ದುರುಪಯೋಗಪಡಿಸಿಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳಲು ಜನರಿಂದ ನೇರವಾಗಿ ಆಯ್ಕೆಯಾದ ಪ್ರತಿನಿಧಿ ನಿಗಾ ವಹಿಸಬೇಕು.ಆದರೆ ವಾಸ್ತವದಲ್ಲಿ ಆಗುತ್ತಿರೋದಾದರೂ ಏನು? ಇಲ್ಲಿ ಅಧಿಕಾರಶಾಹಿಯ ಗುಮ್ಮವನ್ನು ತೋರಿಸುತ್ತ ಪ್ರಜಾಪ್ರತಿನಿಧಿಗಳು ಗೆಬರುವ ಸಂಪತ್ತಿಗೆ ಅಧಿಕಾರಶಾಹಿಗಳೇ ಮೂಕ ಸಾಕ್ಷಿಯಾಗಬೇಕಾದ ಹೀನಾಯ ಪರಿಸ್ಥಿತಿಯಿದೆ.ತಮ್ಮ ಐದೋ-ಹತ್ತೋ ವರ್ಷಗಳ ಆಡಳಿತಾವಧಿಗಳಲ್ಲಿ ರಾಜಕಾರಣಿಗಳು ಮಾಡುವ ಬೃಂಹಾಂಡ ಭ್ರಷ್ಟಾಚಾರಕ್ಕೆ ,ಕೊಲೆ ಸುಲಿಗೆಯಂತಹ ಅನಾಚಾರಗಳಿಗೆ ಕೊನೆಗೆ ತಲೆಕೊಡಬೇಕಾದವರು ಅಧಿಕಾರಶಾಹಿಗಳೇ.ರಾಜಕಾರಣಿಗಳ ಪಾಪದ ಫಲವನ್ನು ತಾನೂ ಚೂರು ಉಂಡ ತಪ್ಪಿಗೆ ಸೇವಾ ನಿವೃತ್ತಿಯ ನಂತರವೂ ಸಿಕ್ಕಿಬಿದ್ದರೆ ಕಂಬಿ ಎನಿಸುವ ಕರ್ಮ ಈ ವರ್ಗದ್ದು.ಇದು ಮೋದಿ ಪ್ರಕರಣದಲ್ಲೂ ಸಾಬೀತಾಗಿದೆ.ಡಾ ಹಿಲ್ಡಾ ರಾಜರ ವಾದದಂತೆ ಮೋದಿ ಮುಗ್ಧರು.ಅದರಂತೆ ಅವರ ಸುತ್ತಲಿನವರ ಪಾಪಕ್ಕೆ ಅವರನ್ನು ಹೊಣೆ ಮಾಡುವುದು ಎಷ್ಟು ಸರಿ ಎನ್ನುವುದನ್ನು ಕೊಂಚ ಗಮನಿಸೋಣ.ಅಲ್ಲ,ಒಬ್ಬ ಮುಖ್ಯಮಂತ್ರಿಯ ಗಮನಕ್ಕೆ ಬಾರದೆ-ಅವರ ಅಣತಿಯಿಲ್ಲದೆ ಸಾಮೂಹಿಕ ಹತ್ಯೆಗಳು,ಬೇಕಾಬಿಟ್ಟಿ ಹುಸಿ ಎನ್ಕೌಂಟರ್ಗಳು ನಡೆಯುತ್ತವೆ ಎಂದು ನಂಬಿಸಲು ಹೊರಟಿರುವ ಲೇಖಕಿ ಯಾರ ಕಿವಿಯ ಮೇಲೆ ಹೂವಿಡಲು ಹೊರಟಿದ್ದಾರೆ? ಅವರೂ ಕೂಡ ಅವರದ್ದೇ ಆದ ಈ ವಾದವನ್ನು ನಂಬುವಷ್ಟು ಮುಗ್ಧರಿರಲಾರರು.



ತನ್ನ ಆಡಳಿತ ವ್ಯಾಪ್ತಿಯಲ್ಲಿ ನಡೆದ ಅನಾಚಾರಗಳಿಗೆ ಮುಖ್ಯಮಂತ್ರಿಯೊಬ್ಬ ಅನಿವಾರ್ಯವಾಗಿ ಹೊಣೆಹೊರಲೇಬೇಕು.ಪ್ರಜಾಪ್ರಭುತ್ವದ ಅಣಕದಂತೆ ಕಾರ್ಯಾಂಗ ಹಾಗು ಶಾಸಕಾಂಗದ ಅನೈತಿಕ ಮೈತ್ರಿಯಿಂದ ಕಾನೂನಿಗೆ ಸೂಕ್ತ ಮನ್ನಣೆ ಸಿಗದಿದ್ದಾಗ ಇದೆ ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ಥಂಭ ಮಾಧ್ಯಮ ಕಾವಲು ನಾಯಿಯ ಪಾತ್ರ ವಹಿಸಲೇಬೇಕು.ಸದ್ಯದ ಶೋಚನೀಯ ಪರಿಸ್ಥಿತಿಯಲ್ಲಿ ಮಾಧ್ಯಮ ಹಾಗು ನ್ಯಾಯಾಂಗವಷ್ಟೇ ನನ್ನಂತಹ ಶ್ರೀಸಾಮಾನ್ಯರಿಗೆ ತೋಚುವ ಆಶಾಕಿರಣಗಳು.ಲೇಖಕಿ ಅಂದಂತೆ ನಾನಾ ಟೀವಿ ಚಾನೆಲ್ಗಳು ಮುಗಿಬಿದ್ದಂತೆ ಮೋದಿಯನ್ನ ಗುರಿಯಾಗಿಸಿಕೊಂಡರೆ (ಅವುಗಳ ಟಿಅರ್ಪಿ ಚಪಲವನ್ನ ಕ್ಷಣ ಕಾಲ ಮರೆಯೋಣ) ತಪ್ಪೇನು? ಭೂತಕಾಲದ ಗೋರಿಯಲ್ಲಿ ಮೋದಿ ಹೂತುಹಾಕಿದ ಅನೇಕ ವಾಸ್ತವಗಳ ಆಸರೆಯಲ್ಲಿಯೇ ಅವರಿಂದು ಯಶಸ್ವಿ ರಾಜಕಾರಣಿಯಾಗಿದ್ದಾರೆ ಎಂಬ ನಿತ್ಯಸತ್ಯವನ್ನು ಕುಟುಕು ಕಾರ್ಯಾಚರಣೆಗಳ ಮೂಲಕ ಅನಾವರಣಗೊಳಿಸೋದು ಅಪರಾಧವೇ? ಅಭಿವೃದ್ಧಿಶೀಲ ನಿಲುವುಗಳಿಂದ ಜನಪ್ರಿಯ ಮುಖ್ಯಮಂತ್ರಿಗಳಾದ ಮೋದಿಯವರ ಈ ಜನಪ್ರಿಯತೆಯ ಬಹುಪಾಲು ಅವರೊಳಗಿನ ಯಶಸ್ವಿ ರಾಜಕಾರಣಿಗೂ ಸಲ್ಲಬೇಕಲ್ಲವೇ? ತಾನು ಮಾಡಿದ ಅನಾಚಾರಕ್ಕೆ ತಾನೇ ಬಲಿಯಾಗುವ ಮುನ್ನ ಹಿರಿಯ ಪೊಲೀಸ್ ಅಧಿಕಾರಿ ಡಿ ಜಿ ವಂಜಾರ,ರಾಜ್ ಕುಮಾರ್ ಪಾಂಡಿಯನ್,ಎಂ ಎನ್ ದಿನೇಶರನ್ನು ಮೋದಿ ಹರಕೆಯಕುರಿ ಮಾಡಿದ್ದು ಸುಳ್ಳೇ?



ಇದೇ ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಶುದ್ಧಹಸ್ತರಾದ ಮೋದಿ ವಿಶೇಷ ಆಸಕ್ತಿ ವಹಿಸುತ್ತಾರೆ ತಾವು ನಿಷ್ಪಕ್ಷಪಾತಿ ಎನ್ನುವ ಘೋಷಣೆಯೊಂದಿಗೆ ಪ್ರಕರಣದ ತನಿಖೆಗೆ ವಿಶೇಷ ತನಿಖಾದಳವನ್ನು ನಿಯುಕ್ತಗೊಳಿಸುತ್ತಾರೆ.ಹಿರಿಯ ಪೊಲೀಸ್ ಅಧಿಕಾರಿಗಳಾದ ಅಭಯ್ ಚೂಡಾಸಮಾ ಹಾಗು ಎನ್ ಕೆ ಅಮೀನ್ ರಿಗೆ ಜಂಟಿಯಾಗಿ ಅದರ ಉಸ್ತುವಾರಿ ವಹಿಸಲಾಗುತ್ತದೆ.ಸದರಿ ನೇಮಕ ಆದೇಶ ನೇರವಾಗಿ ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಹೊರಬಿದ್ದಿರುತ್ತದೆ.ಅಮಿತ್ ಶಾ ಗುಜರಾತಿನ ಸಹಾಯಕ ಗೃಹ ಸಚಿವರಾಗಿರುವುದರಿಂದ ಹಾಗು ಗೃಹಖಾತೆಯು ನೇರವಾಗಿ ಅಲ್ಲಿನ ಮುಖ್ಯಮಂತ್ರಿಗಳ ಉಸ್ತುವಾರಿಯಲ್ಲಿರುವುದರಿಂದ ಇದನ್ನು ಒಂದು ಸಹಜ ನಡೆ ಎಂಬಂತೆ ಬಿಂಬಿಸಲಾಗುತ್ತದೆ.ಕುಚೋದ್ಯದ ಸಂಗತಿಯೆಂದರೆ ಈ ನಡುವೆ ಅಲ್ಲಿನ ಸಿಒಡಿ ತನ್ನ ಹೊಣೆಗಾರಿಕೆಯಂತೆ ತನಿಖೆ ನಡೆಸಿ ಸರಕಾರಕ್ಕೆ ಸಲ್ಲಿಸುವ ವರದಿ ಅಮೀನ್ ಹಾಗು ಚೂಡಾಸಮಾರನ್ನು ಸದರಿ ಪ್ರಕರಣದಲ್ಲಿ ಅಪರಾಧಿಗಳನ್ನಾಗಿ ಗುರುತಿಸುತ್ತದೆ.ಪ್ರಕರಣದಲ್ಲಿ ಇವರಿಬ್ಬರ ಪಾತ್ರವಿರುವುದನ್ನು ೧೦೦೦ ಪುಟಗಳ ಈ ವರದಿ ಬೊಟ್ಟು ಮಾಡಿ ತೋರಿಸುತ್ತಾದೆ.ಹೀಗಿದ್ಧೂ ಅವರ ಕೂದಲು ಸಹ ಕೊಂಕುವುದಿಲ್ಲ,ಏಕೆಂದರೆ ಪ್ರಕರಣದ ವರದಿಯನ್ನು ಮಾನ್ಯ ಮುಖ್ಯಮಂತ್ರಿಗಳು ಹಳ್ಳ ಹಿಡಿಸುವ ತಯಾರಿಯಲ್ಲಿರುತ್ತಾರೆ.ಹೀಗಿರುವಾಗ ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ವರದಿಗೆ ಸಿಬಿಐ ಜೀವ ತುಂಬುತ್ತದೆ.ನೆನಪಿಡಿ ;ಇಲ್ಲಿ ಮುತುವರ್ಜಿ ವಹಿಸಿದ್ದು ಸರ್ವೋಚ್ಛ ನ್ಯಾಯಾಲಯವೇ ಹೊರತು ನಂ ೧೦,ಜನಪಥ ರಸ್ತೆಯಲ್ಲ!




ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ತಮ್ಮ ಬಲಗೈ ಭಂಟರಾದ ಚೂಡಾಸಮಾ ಹಾಗು ಅಮೀನ್ ಕಾನೂನಿನ ಕುಣಿಕೆಗೆ ಸಿಕ್ಕಿ ಬಿದ್ದಾಗ ವಿಶೇಷ ತನಿಖಾದಳದ ಉಸ್ತುವಾರಿಯನ್ನು ಮುಖ್ಯಮಂತ್ರಿಗಳು ದಕ್ಷ ಪೊಲೀಸ್ ಅಧಿಕಾರಿಯಾದ ಗೀತ ಜೋಹ್ರಿಗೆ ವಹಿಸಿ ಇಡಿ ದಳವನ್ನೇ ಪುನರ್ರಚಿಸುತ್ತಾರೆ.ಇದು ಅನಿವಾರ್ಯ ನಡೆ ಅನ್ನುವುದು ಗಮನಾರ್ಹ,ಆದರೆ ಇಲ್ಲೂ ತಮ್ಮ ಶಾಣ್ಯಾ ತನ ಮೆರೆಯುವ ಮುಖ್ಯಮಂತ್ರಿಗಳು ಶ್ರೀಮತಿ ಗೀತ ಜೋಹ್ರಿಯ ಪತಿ ಭಾರತೀಯ ಅರಣ್ಯ ಸೇವೆಯ ಗುಜರಾತ್ ಕೇಡರ್ ನ ಅಧಿಕಾರಿ ಜೋಹ್ರಿಯ ಕತ್ತಿಗೆ ವಿಶೇಷ ಗುಪ್ತ ಕಾಯಿದೆಯಡಿ ಭ್ರಷ್ಟಾಚಾರದ ದೊಡ್ಡ ಕೇಸನ್ನು ಸದ್ದಿಲ್ಲದೇ ತಗಲಿಸುತ್ತಾರೆ.ಒಂದು ವೇಳೆ ಹೆಂಡತಿ ಸರಿಯಾಗಿ ಕೆಲಸ ನಿರ್ವಹಿಸಿದರೆ ಗಂಡ ಕಂಬಿ ಎಣಿಸುವ ಮುಸುಕಿನ ಬೆದರಿಕೆ! ಅಂದರೆ ಶ್ರೀಮತಿ ಗೀತ ಜೋಹ್ರಿಗೆ ವಿಶೇಷ ತನಿಖಾದಳದ ಉಸ್ತುವಾರಿ ವಹಿಸಿ ಕೊಡುವ ಉದ್ದೇಶವೇ ಸೊಹ್ರಾಬುದ್ದೀನ್ ಪ್ರಕರಣದ ಹಳಿತಪ್ಪಿಸುವುದು. ಪ್ರಕರಣದ ತನಿಖೆಯನ್ನು ಗುರಿ ತಪ್ಪಿಸಿ ಸಿಬಿಐ ಬೇಟೆನಾಯಿಗಳನ್ನು ಹಾದಿ ತಪ್ಪಿಸುವ ಪವಿತ್ರ ಕಾರ್ಯ ಮಾನ್ಯ ಮುಖ್ಯಮಂತ್ರಿಗಳ ಕಛೇರಿಯಿಂದಲೇ ಶ್ರೀಮತಿ ಗೀತ ಜೋಹ್ರಿಯವರಿಗೆ ನಿರ್ದೇಶಿತವಾಗಿರುತ್ತದೆ.


ಇನ್ನು ಸಿಬಿಐಯ ದುರುಪಯೋಗದ ವಿಷಯಕ್ಕೆ ಬರೋಣ.ಕಾಲಕಾಲಕ್ಕೆ ಕೇಂದ್ರೀಯ ಆಂತರಿಕ ತನಿಖಾ ಸಂಸ್ಥೆ ಎಲ್ಲಾ ಆಡಳಿತಾರೂಢ ಸರಕಾರಗಳಿಂದ ಸಖತ್ತಗಿಯೇ ದುರುಪಯೋಗವಾಗುತ್ತ ಬಂದಿದೆ.ಬರೋಡಾ ಹುಸಿ ಡೈನಮೇಟ್ ಪ್ರಕರಣದಲ್ಲಿ ಜಾರ್ಜ್ ಫೆರ್ನಾಂಡಿಸ್ ರನ್ನು ಹಣಿಯಲು ಪ್ರಯತ್ನಿಸಿದ ಇಂದಿರಾ ಸರಕಾರ,"ಕಿಸ್ಸಾ ಕುರ್ಸೀಕ" ಮುಂದೊಡ್ಡಿ ಸಂಜಯಗಾಂಧಿಯ ಮಗ್ಗುಲು ಮುರಿಯೋಕೆ ಹೊರಟ ಮೊರಾರ್ಜಿಭಾಯಿ ಸರಕಾರ,ಇಂದಿರೆಯ ಮಗ ರಾಜೀವ್ ಸೃಷ್ಟಿಸಿ ವಿ ಪಿ ಸಿಂಗರನ್ನು ಸಿಲುಕಿಸಲು ಹವಣಿಸಿದ ಫೇರ್ಪಾಕ್ಸ್ ಹಗರಣ,ಅದೇ ವಿ ಪಿ ಸಿಂಗ್ ರಾಜೀವರಿಗೆ ಮುಯ್ಯಿ ತೀರಿಸಲು ಬಳಸಿದ ಬೋಫೋರ್ಸ್ ಪ್ರಕರಣ,ಅಸಾಧ್ಯ ಮುದುಕ ಪಿ ವಿ ನರಸಿಂಹ ರಾವ್ ಸರಕಾರ ಸ್ವಪಕ್ಷೀಯರನ್ನೇ ತಹಬಂದಿಗೆ ತರಲು ಬಳಸಿದ ಜೈನ್ ಹವಾಲ ಡೈರಿ ಪ್ರಕರಣ,ಆದಾಯಕ್ಕೆ ಮೀರಿದ ಗಳಿಕೆಗೆ ಕೊಕ್ಕೆ ಹಾಕಲು ಹೋಗಿ ಅಂದಿನ ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿಯಿಂದ ಒದೆಸಿಕೊಂಡ ಹೆಚ್ ಡಿ ದೇವೇಗೌಡರ ಸರಕಾರ,ತಮ್ಮ ಪಕ್ಷದ ಅಧ್ಯಕ್ಷರನ್ನ ಹಣದ ಸಮೇತ ಹಿಡಿದು ಮುಖಭಂಗ ಮಾಡಿದ ಸೇಡಿಗೆ ತೆಹೆಲ್ಕ ಮೇಲೆ ಮುಗಿಬಿದ್ದ ಎನ್ಡಿಏ ಸರಕಾರ ಇವೆಲ್ಲ ಅಸಲಿಗೆ ಮಾಡಿದ್ದಾದರೂ ಏನು? ಇಲ್ಲಿ ಪಕ್ಷಭೇದ ಕಾಣಿಸಿದರೆ ಅದು ನೋಡುವವರ ದೃಷ್ಟಿ ದೋಷವಷ್ಟೇ.ಅಲ್ಲದೆ ಸಿಬಿಐ ಇಲ್ಲಿಯವರೆಗೆ ತನಿಖೆ ನಡೆಸಿದ ಒಟ್ಟಾರೆ ಪ್ರಕರಣಗಳಲ್ಲಿ ಕೆಟ್ಟ ಹೆಸರು ಪಡೆದಿದ್ದು ರಾಜಕಾರಣಿಗಳಿಗೆ ಸಂಬಂಧಿಸಿದ ಕೇಸುಗಳಲ್ಲಿ ಮಾತ್ರ.ಇಲ್ಲಿ ಅದರ ಯಶಸ್ಸಿನ ದರ ಶೇ;೨೩,ಆದರೆ ಇನ್ನುಳಿದಂತೆ ನ್ಯಾಯಾಂಗದ ನಿರ್ದೇಶನದಂತೆ ನಡೆಸಿದ ಸ್ವತಂತ್ರ ತನಿಖೆಗಳಲ್ಲಿ ದರ ಶೇ;೭೮ನ್ನು ಮುಟ್ಟುತ್ತದೆ.ಉಳಿದ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿದ್ದಾರೆ.ಅಂದ ಹಾಗೆ ಅಮಿತ್ ಶಾ ಅರ್ಥಾತ್ ಮೋದಿ ಪ್ರಕರಣ ಅಂತಹದ್ದೊಂದು ಸ್ವತಂತ್ರ ತನಿಖಾ ಪ್ರಕರಣ.



ಇನ್ನು ರಾಜಭವನದ ವಿಷಯಕ್ಕೆ ಬಂದರೆ ಅದು ಕೇಂದ್ರ ಸರಕಾರಗಳು ತಮ್ಮ ಸ್ವಕಾರ್ಯ ಸಾಧನೆಗೆ ಮಾಡಿಕೊಂಡ ಸುರಕ್ಷಿತ ವ್ಯವಸ್ಥೆಯಂತೆಯೂ,ವೃದ್ದ ರಾಜಕಾರಣಿಗಳ ಗಂಜಿಕೆಂದ್ರದಂತೆಯೂ ಏಕಕಾಲದಲ್ಲಿ ಅದು ಗೋಚರವಾಗುತ್ತದೆ.ತಮ್ಮ ನಿಲುವಿಗೆ ಸೆಡ್ಡು ಹೊಡೆದು ವಿರುದ್ಧವಾಗಿ ನಡೆಯುವ ರಾಜ್ಯ ಸರಕಾರಗಳಿಗೆ ಮೂಗುದಾರ ಹಾಕಲು ಎಲ್ಲ ಕೇಂದ್ರ ಸರಕಾರಗಳೂ ಸುಲಭವಾಗಿ ಉಪಯೋಗಿಸಿಕೊಳ್ಳುವ ರಾಜ್ಯಪಾಲರನ್ನು ಏಕಾಗಿಯಾದರೂ ದೂರಬೇಕು? ತಮ್ಮನ್ನು ನೇಮಿಸಿದ ಸ್ವಾಮಿಗಳ ಕಾಲು ನೆಕ್ಕಲು,ಅವರ ಹಿತ ಕಾಯಲು ಸದಾ ಸಿದ್ಧರಾಗಿರುವ ಅವರ ನಡೆನುಡಿಗಳನ್ನು ಗಂಭೀರವಾಗಿ ಪರಿಗಣಿಸುವುದೇ ಹಾಸ್ಯಾಸ್ಪದ.ಇತ್ತೀಚಿಗಿನ ಉದಾಹಾರಣೆಯನ್ನೇ ತೆಗೆದುಕೊಂಡರೆ ಈ ಭಾರಧ್ವಾಜ್ ರಂತೆಯೇ ಕರ್ನಾಟಕದಲ್ಲಿ ಟಿ ಎನ್ ಚತುರ್ವೆದಿಗಳೂ,ವಿ ಎಸ್ ರಮಾದೇವಿಯವರೂ.ಪಕ್ಕದ ತಮಿಳುನಾಡಿನಲ್ಲಿ ನ್ಯಾ ಫಾತಿಮಾಬೀವಿಯವರೂ ವರ್ತಿಸಿ ನಗೆಪಾಟಲಿಗೆ ಈಡಾಗಿದ್ದರು.ಉತ್ತರ ಪ್ರದೇಶದಲ್ಲಂತೂ ರೋಮೇಶ್ ಭಂಡಾರಿ ಎಂಬ ಜೋಕರ್ ಭರಪೂರ ಬಿಟ್ಟಿ ಮನರಂಜನೆ ಕೊಟ್ಟ.ಸದ್ಯ ಸೈಯ್ಯದ್ ಸಿಬ್ತೆ ರಿಜಿ ಅದೇ ಹಾದಿಯಲ್ಲಿದ್ದಾರೆ.ಇನ್ಯಾರೋ ಯಾಕೆ? ನಮ್ಮವರೇ ನ್ಯಾ ರಾಮಾ ಜೋಯಿಸ್ರವರು ಬಿಹಾರ್ ಹಾಗು ಜಾರ್ಖಂಡ್ಗಳಲ್ಲಿ ಮಾಡಿದ್ದಾದರೂ ಏನು? ಈ ಸರ್ವಕಾಲಿಕ -ಸಾರ್ವತ್ರಿಕ ಚಮಚಾಗಿರಿಗೆ ವಿಶೇಷ ಮಹತ್ವ ಕೊಡಬೇಕ?


ಭೋಪಾಲ್ ಅನಿಲ ದುರಂತ,ಜಗದೀಶ್ ಟೈಟ್ಲರ್-ಸಜ್ಜನ್ ಕುಮಾರ್ ಸಾರಥ್ಯದ ಸಿಕ್ಖ್ ಹತ್ಯಾಕಾಂಡವನ್ನು ಲೇಖಕಿ ಪ್ರಸ್ತಾವಿಸಿರುವುದರಲ್ಲಿ ತಥ್ಯವಿದೆ.ಹೌದು,ರಾಜೀವ್ ಗಾಂಧಿಯಿಂದ ಹಿಡಿದು ಬೋಫೋರ್ಸ್ ಪ್ರಕರಣದ ಪ್ರಮುಖ ಆರೋಪಿ ಒಟ್ಟಾವಿಯೋ ಕ್ವಟ್ರೋಕಿ ಭಾರತದಿಂದ ಸುಲಭವಾಗಿ ಪಲಾಯನ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಸೋನಿಯಾ ಗಾಂಧಿಯವರೆಗೆ ಎಲ್ಲರೂ ಕಾನೂನಿನ ದೃಷ್ಟಿಯಲ್ಲಿ ಅಪರಾಧಿಗಳೇ.ಆದರೆ ಕುಣಿಕೆಯ ಅಂಕುಶ ಅವರದ್ದೇ ಕೈಯಲ್ಲಿ ಇರುವತನಕ,ಕೇಂದ್ರೀಯ ಆಂತರಿಕ ತನಿಖಾ ದಳ ಸಂಪೂರ್ಣ ಸ್ವಾಯುತ್ತವಾಗುವ ತನಕ ನ್ಯಾಯಯುತವಾದ ತೀರ್ಮಾನ ಕೇವಲ ಕುದುರೆ ಮೊಟ್ಟೆ ಅನ್ನಿಸುತ್ತದೆ.


ಮೋದಿಯವರು ಒಂದು ವೇಳೆ ಸ್ವಚ್ಛ ಚಾರಿತ್ರ್ಯ ಹೊಂದಿದ್ದ ಪಕ್ಷದಲ್ಲಿ ಅವರ ಮೇಲೆ ಕೆಸರೆರಚುವ ಹುಂಬರ ಪ್ರಯತ್ನ ಕೇವಲ ಗಾಳಿಯೊಂದಿಗಿನ ಗುದ್ದಾಟವಷ್ಟೇ ಆಗುತ್ತದೆ.ಆದರೆ ಹೇಸಿಗೆಯಲ್ಲೇ ಬಿದ್ದು ಹೊರಳಾಡುವ ಹಂದಿ ಗಂಧ ಪೂಸಿ ಕೊಂಡವರತ್ತ ಗುಟುರು ಹಾಕಿದರೆ ಎಲ್ಲಿಂದ ನಗುವುದು ಹೇಳಿ? ಇದನ್ನು ಮೋದಿ ಹಾಗು ಅಂಧ ಅಭಿಮಾನದಿಂದ ಅವರ ಪರ ಭೋಪರಾಕ್ ಹೇಳುವ ಅವರ ಎಲ್ಲ ಅಭಿಮಾನಿಗಳೂ ಅರಿತರೆ ಒಳ್ಳೆಯದಿತ್ತು.

No comments: