18 August 2010

ಬಚ್ಚೆಗೌಡ ಪುರಾಣಮು...part-2

ಸಚಿವ ಬಚ್ಚೆ ಗೌಡರ ಕೊಚ್ಚೆ ಬಾಯಿ ಮತ್ತೊಮ್ಮೆ ಬಿಟ್ಟಿದೆ.ಈ ಬಾರಿ ಪರಮ ಸಾತ್ವಿಕನ ಗೆಟಪ್ಪಿನಲ್ಲಿ ಅನ್ನೋದಷ್ಟೇ ಚಿಕ್ಕ ಬದಲಾವಣೆ.ಕಳೆದ ಮೂರು ದಿನಗಳಿಂದ ಅವರ ವಿರುದ್ಧ ನಡೆಯುತ್ತಿರುವುದು ವ್ಯವಸ್ತಿತ ಪಿತೂರಿಯಂತೆ! ಭಾರಿ ಷಡ್ಯಂತ್ರವಂತೆ!! ಸದ್ಯ,ಇದರ ಹಿಂದೆ ವಿದೇಶಿ ಕೈವಾಡ ಇದೆ ಎಂದು ಅವರು ಹೇಳಲಿಲ್ಲ,ಅವಸರದಲ್ಲಿ ಮರೆತು ಬಿಟ್ಟರೆನೋ?!


ಮೊನ್ನೆ ಅಂದರೆ ಆಗಷ್ಟ್ ೧೫ರನ್ದು ಸಂಜೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದದ್ದಿಷ್ಟು.ಮಾನ್ಯ ಸಚಿವ ಬಚ್ಚೆ ಗೌಡರ ಸವಾರಿ ಹಾಸನದಿಂದ ಬೆಂದಕಾಳೂರಿಗೆ ಚಿತ್ತೈಸುತ್ತಿತ್ತು.ಆವಾಗ ಭರತ್ನೆಂಬ ದುರುಳ ಅವರ ಸರಕಾರಿ ವಾಹನವನ್ನು ಓವರ್ ಟೇಕ್ ಮಾಡುವ ದುಸ್ಸಾಹಸಕ್ಕೆ ಇಳಿದಿದ್ದಾನೆ.ಸದರಿ ಸಂದರ್ಭದಲ್ಲಿ ಆತ ಸಫಾರಿ ವಾಹನದಲ್ಲಿದ್ದುದು ಮೊದಲನೇ ತಪ್ಪು ( ಸಚಿವರಿಗಿಂತ ದುಬಾರಿ ವಾಹನದಲ್ಲಿ ಅವರೆದುರಿಗೆ ಮೆರೆಯುವುದು ಎಂದರೇನು?),ಸಾಲದ್ದಕ್ಕೆ ಒಳಗಿನ ಲೇನ್ ನಲ್ಲಿದ್ದ ಅವನ ವಾಹನ ಘನ ಸಚಿವರ ಎರಡನೇ ಲೇನ್ ನಲ್ಲಿದ್ದ ಸರಕಾರಿ ಸಾರೋಟನ್ನ ಹಿಂದಿಕ್ಕುವ ಉದ್ಧಟತನ ತೋರಿದ್ದು ಎರಡನೇ ತಪ್ಪು.ಇಂತಹ ಪಾಪಿಗೆ...ನೀಚನಿಗೆ ಸ್ಥಳದಲ್ಲಿಯೆ ತಮ್ಮ ನಿತ್ಯದ ಶೈಲಿಯ ಅಮ್ಮ ..ಅಕ್ಕ... ಮಂತ್ರಪುಷ್ಪವನ್ನು ಧಾರಾಳವಾಗಿ ಉದುರಿಸುತ್ತ ಸನ್ಮಾನ್ಯ ಸಚಿವರು ಅರ್ಚನೆ ಆರಂಭಿಸಿದ್ದಾರೆ.ನಡುವೆ ತಮ್ಮ ಕಾಲಿಗೆರಗಿ ಕೃಪಾಶಿರ್ವಾದಕ್ಕಾಗಿ ಅಂಗಲಾಚಿದ ಭರತ್ ತಂದೆ ಲೋಕಪ್ಪಗೌಡರಿಗೆ ತಮ್ಮ ಬೂಟುಗಾಲಿನಿಂದ ಸರಿಯಾಗಿ ಪೂಜೆಯನ್ನೂ ಮಾಡಿದ್ದಾರೆ.ಇವರೊಂದಿಗೆ ಬಚ್ಚೆಗೌಡರ ಗಣ ಗಳಾದ ಡ್ರೈವರ್ ದೇವದಾಸ್ ಹಾಗು ಗನ್ ಮ್ಯಾನ್ ರಾಜಶೇಖರ್ ಇತ್ತ ಭರತ್ ನನ್ನ ಸರಿಯಾಗಿ ವಿಚಾರಿಸಿಕೊಂಡು ತಮ್ಮ ಆದಿದೈವದ ಪೂಜೆ ಸಾಂಗವಾಗಿ ನೆರವೇರಲು ತಮ್ಮ ಕೈಲಾದ ಸೇವೆ ಸಲ್ಲಿಸಿದ್ದಾರೆ.



ಮಾನ್ಯ ಕಾರ್ಮಿಕ ಸಚಿವರು ಯಾವುದಾದರು ರಾಜಮಾರ್ಗಗಳಲ್ಲಿ ಕೇವಲ ಹತ್ತೆ ಕಿಲೋಮೀಟರ್ ವೇಗದಲ್ಲಿ ತಮ್ಮ ಸರಕಾರಿ ಗೂಟದ ಐರಾವತವನ್ನೇರಿ ಲೋಕ ಸಂಚಾರಕ್ಕಾಗಿ ಹೊರಟರೆ ಉಳಿದ ಎಲ್ಲಾ ಪಾಮರರು ಸಚಿವರ ಗೌರವಾರ್ಥವಾಗಿ ಕೇವಲ ಐದೇ ಕಿಲೋಮೀಟರ್ ವೇಗದಲ್ಲಿ ಸಾಹೇಬರ ಅಂಬಾರಿಯ ಹಿಂದೆ ತೆವಳುತ್ತ ಡೊಗ್ಗು ಸಲಾಮು ಹಾಕದೆ ತಿಮಿರು ತೋರಿದಲ್ಲಿ ಭರತ್ ಎಂಬ ಈ ದುರುಳನಿಗಾದ ಗತಿಯೆ ಅವರಿಗೂ ಆಗುತ್ತದೆ ಹಾಗು ಆಗಲೇಬೇಕು.ಎಷ್ಟೆಂದರೂ ಅವರು ಆಳುವ ಪ್ರಭುಗಳು ಹಾಗು ನಾವು ನೀವೆಲ್ಲ ಅವರ ಸೇವೆಗೆ ಟೊಂಕ ಕಟ್ಟಿ ನಿಲ್ಲಬೇಕಾದ ಪ್ರಜೆಗಳು.ಅಲ್ಲಲ್ಲಿ-ಆಗಾಗ ದುಷ್ಟರ ಹಾವಳಿ ಹೆಚ್ಚಿದಾಗ ಬಿಜೆಪಿ ಸರಕಾರದ ಮಂತ್ರಿ ಮಹೋದಯರು ದುಷ್ಟ ಶಿಕ್ಷೆಗೂ...ಶಿಷ್ಟ (ಅಂದರೆ ಸದರಿ ಮಂತ್ರಿಗಳು ಅಂತ ಓದಿಕೊಳ್ಳಬೇಕಾಗಿ ವಿನಂತಿ) ರಕ್ಷಣೆಗೂ ಮುಂದಾಗುತ್ತಾರೆ ಎನ್ನುವುದಷ್ಟೇ ಈ ಪುಣ್ಯ ಕಥೆಯ ಸಾರ..enjoy...

No comments: