28 August 2010

ಘಟ್ಟದ ಋಣ...

{ ೨೩/ ಆಗಷ್ಟ್ ೨೦೦೮ ರಿಂದ ಮುಂದುವರಿಕೆ}



ನಡೆದಿರುವ ಘಟನೆಗಳೆಲ್ಲ ನನ್ನ ಬಾಳಿನ ಅಂಗಗಳೇ ಆದರೂ ಆದಷ್ಟು ನಿರ್ಲಿಪ್ತನಾಗಿ ವಸ್ತು ಸ್ಥಿತಿಯನ್ನಷ್ಟೆ ಇಲ್ಲಿ ಬಿಡಿಸಿಡಲು ಯತ್ನಿಸಿದ್ದೇನೆ.ಬಹಳಷ್ಟು ಸಂಗತಿಗಳಲ್ಲಿ ನಾನು ಪಾತ್ರಧಾರಿಯಲ್ಲ.ಅವುಗಳನ್ನೆಲ್ಲ ಒಂದೋ ಮನೆಯ ಹಿರಿಯರಿಂದ-ಇಲ್ಲವೆ ಬಲ್ಲ ಆತ್ಮೀಯರಿಂದ ಕೇಳಿ ತಿಳಿದು ಕೊಂಡದ್ದು.ಅಂತಹ ಸನ್ನಿವೇಶಗಳಲ್ಲಿ ಪ್ರತ್ಯಕ್ಷ ಪಾತ್ರವಾಗಿದ್ದವರು ಬದುಕಿದ್ದ ಪಕ್ಷದಲ್ಲಿ ಅವರನ್ನು ಪತ್ರ ಮುಖೇನ ಇಲ್ಲವೆ ದೂರವಾಣಿ ಮುಖೇನ ಸಂಪರ್ಕಿಸಿ ಸನ್ನಿವೇಶ ಗಳ ಸತ್ಯಾಸತ್ಯತೆ ಗಳನ್ನು ಖಚಿತ ಪಡಿಸಿ ಕೊಂಡೆ ಮುಂದು ವರೆದಿದ್ದೇನೆ.ಹೀಗಾಗಿ ಇಲ್ಲಿ ನಾನು ನಿರ್ಮಮ ಲಿಪಿಕಾರ ಮಾತ್ರ.ಬರವಣಿಗೆ ಕೇವಲ ನಡೆದ ಘಟನೆಗಳ ಕೈಗನ್ನಡಿ ಯಾಗಿರಬೇಕು,ಯಾವುದೇ ಅತಿರಂಜಿತ ಸಂಯೋಜನೆಯಲ್ಲಿ ಸತ್ಯಕ್ಕೆ ಅಪಚಾರವಾಗ ಬಾರದು ಎಂಬ ಕಳಕಳಿ ಇದಕ್ಕೆ ಕಾರಣ.




ಖುದ್ದು ನಾನೇ ಪಾತ್ರವಾಗಿರುವ ಸಂಗತಿಗಳನ್ನೂ ಥಿಯೇಟರ್ ನಲ್ಲಿ ಕೂತು ಇನ್ಯಾರದೋ ಸಿನೆಮ ನೋಡುವ ಮೂಡಿನಲ್ಲಿ ವಿವರಿಸಿದ್ದೇನೆ.ನನ್ನ ಪಾತ್ರದ ಮೇಲೆ ವಿಶೇಷ ಮಮಕಾರ ನನ್ನಲ್ಲಿ ಹುಟ್ಟದ ಕಾರಣ ನಾನು ಈ ಲಹರಿಯ 'ನಾಯಕ'ನೂ ಅಲ್ಲ.ಒಬ್ಬ ಪುಟ್ಟ ಹುಡುಗನಾಗಿ ನಾ ಕಂಡು ಕೇಳಿದ ಸಂಗತಿಗಳನ್ನು ನಯವಾಗಿ ಹರವಿಡುವ ಪ್ರಯತ್ನ ಮಾತ್ರ ನನ್ನದು.ವಯಕ್ತಿಕವಾಗಿ ನನಗೆ ಘಾಸಿಯನ್ನುಂಟು ಮಾಡಿದ ಘಟನೆ-ನೋವನ್ನು ಉಂಟುಮಾಡಿದ ವ್ಯಕ್ತಿಗಳ ಕುರಿತು ಬರೆಯುವಾಗಲೂ ಆದಷ್ಟು ಸಂಯಮವನ್ನ ಬರವಣಿಗೆಯಲ್ಲಿ ಸಾಧಿಸಲು ಪ್ರಯತ್ನಿಸಿದ್ದೇನೆ.ಮೊದಮೊದಲು ಇದು ಸ್ವಲ್ಪ ಕಷ್ಟ ಎಂದೆನಿಸಿದರೂ ಕ್ರಮೇಣ ಇದೆ ರೂಢಿಯಾಗ ತೊಡಗಿದೆ.ಈ ನನ್ನ ಮುಂಬರುವ ಯಾವುದೆ ಲೇಖನಗಳು ನನ್ನ ರಕ್ತ ಸಂಬಂಧಿಗಳಿಗೂ,ಸ್ನೇಹಿತರಿಗೊ,ಕುಲ ಬಾಂಧವರಿಗೂ ಜೀರ್ಣವಾಗದಿದ್ದರೆ ಅದವರ ಖಾಸಗಿ ಸಮಸ್ಯೆಯೆ ಹೊರತು ಪ್ರತಿಯೊಬ್ಬರಿಗೂ ಜಾಪಾಳ ಮಾತ್ರೆ ನುಂಗಿಸುವ ಕೆಲಸ ನನ್ನದಲ್ಲ.ಒಟ್ಟಿನಲ್ಲಿ ನಿರೀಕ್ಷಣಾ ಜಾಮೀನಿನಂತೆ ಹೇಳ ಬಯಸೋದು ಇಷ್ಟೆ ಕೇವಲ ಒಂದೆ ಕೈಯಲ್ಲಿ ಎಣಿಸಬಹುದಾದಷ್ಟು ಮಂದಿ ಮಾತ್ರ ನನ್ನ ಸ್ವಂತ ಭಾವಲೋಕದ ಬಂಧುಗಳು.ಅವರನ್ನು ಬಿಟ್ಟು ಇನ್ಯಾರ ಮೇಲೂ ನನಗೆ ರಾಗ-ದ್ವೇಷಗಳಿಲ್ಲ.ಈ ಹತ್ತಿರದವರ ಬಿಂಬಗಳೂ ಮುಸುಕಾಗದಂತೆ ಇಲ್ಲವರ ಚಿತ್ರಣ ಬರುತ್ತದೆ.ಮನಸಿನ ಮೇಲಿದ್ದ ನೆನಪಿನ ಭಾರವನ್ನು ಅಕ್ಷರಗಳಲ್ಲಿ ಕೆಳಗಿರಿಸಿ 'ಉಸ್ಸಪ್ಪ'ಎಂದು ಸುಧಾರಿಸಿಕೊಳ್ಳುವ ಧಾವಂತ ಹೊಸತೆ ಒಂದು ರೀತಿಯ ನೆಮ್ಮದಿಯನ್ನ ನನಗೆ ದಯಪಾಲಿಸಿದೆ ಅನ್ನೂದು ಮಾತ್ರ ಹದಿನಾರಾಣೆ ಸತ್ಯ,





*********************

ನನ್ನಜ್ಜನ ಕಾಲಕ್ಕೆ ದಕ್ಷಿಣ ಕನ್ನಡ ( ಈಗಿನ ಉದುಪಿ) ಜಿಲ್ಲೆಯಿಂದ ಘಟ್ಟಕ್ಕೆ ವಲಸೆ ಬಂದ ಕುಟುಂಬ ನಮ್ಮದು.ನನ್ನಜ್ಜ ನಾರಾಯಣ ಹೆಗಡೆಯದು ಒಂಚೂರು ಪುಕ್ಕಲು ಸ್ವಭಾವ.ನಾಲ್ಕುಜನ ಒಡಹುಟ್ಟಿದವರಲ್ಲಿ ಮೂರನೆಯವರಾದ ಅವರ ಹುಟ್ಟೂರು ಕಾರ್ಕಳ ತಾಲೂಕಿನ ಮುನಿಯಾಲು ಬಳಿಯಿರುವ ಗುಡ್ಡೆಮನೆ.ಮನೆಯ ಯಜಮಾನನಾಗಿದ್ದ ಹಿರಿಯಣ್ಣ ಹಾವು ಕಚ್ಚಿ ಸತ್ತ ನಂತರ ಮನೆಯ ಆಡಳಿತ ಅಕ್ಕ ಚನ್ನಕ್ಕನ ಪಾಲಾಯಿತು.ಅವರ ದಬ್ಬಾಳಿಕೆಯ ಹಾಗು ನಯವಿಲ್ಲದ ಒರಟು ನಡವಳಿಕೆಯನ್ನ ಮುಲಾಜಿಲ್ಲದೆ ಧಿಕ್ಕರಿಸಿ ಅಜ್ಜನ ತಮ್ಮ ನಾಗಪ್ಪ ಹೆಗಡೆ ತನ್ನ ವಯಸ್ಸಿನ್ನೂ ಎರಡಂಕಿ ಮೀರುವ ಮೊದಲೆ ಘಟ್ಟ ಹತ್ತಿ ಕೊಪ್ಪಕ್ಕೆ ಬಂದು ಸೇರಿದರು.ಆ ಕಾಲದಲ್ಲಿ ಜನಪ್ರಿಯರಾಗಿದ್ದ ಕೊಪ್ಪದ ದ್ಯಾವೆಗೌಡರ ಮನೆಯಲ್ಲಿ ದೀಪದ ಗಾಜು ಒರೆಸುವ (ಆಗ ವಿದ್ಯುತ್ ಸಂಪರ್ಕ ಕೊಪ್ಪದಲ್ಲಿ ಇರಲಿಲ್ಲ,ಹೀಗಾಗಿ ಬಡವರಿಂದ ಸಿರಿವಂತರವರೆಗೂ ದೀಪವೆ ಬೆಳಕಿಗೆ ಮೂಲವಾಗಿತ್ತು) ಕಾಯಕದೊಂದಿಗೆ ಅಲ್ಲಿ ಅವರ ದುಡಿಮೆ ಆರಂಭ ವಾಯ್ತು.ಹೀಗೆ ಧೈರ್ಯವಾಗಿ ಮನೆಬಿಟ್ಟು ಹೋಗಿದ್ದ ತಮ್ಮನ ಮೇಲ್ಪಂಕ್ತಿ ಅನುಸರಿಸಿ ನನ್ನಜ್ಜನೂ ಎರಡು ವರ್ಷಗಳ ನಂತರ ಘಟ್ಟ ಹಟ್ಟಿ ತೀರ್ತಹಳ್ಳಿಯಲ್ಲಿ ನೆಲೆಕಂಡರು.


ತೀರ್ಥಹಳ್ಳಿಯ ಕೊಪ್ಪ ರಸ್ತೆಯಲ್ಲಿರುವ ತಿಪ್ಪ ಜೋಯಿಸರ ಮನೆಯ ಅಡುಗೆ ಆಳಾಗಿ ಅವರ ಸ್ವಾತಂತ್ರ್ಯ ದುಡಿಮೆ ಶುರುವಾಯ್ತು.ಆಗಿನ ಮೊದಲ ಸಂಬಳ ನಲವತ್ತು ರೂಪಾಯಿಗಳು.ಕ್ರಮೇಣ ಮನೆಯವರ ನಂಬಿಕೆ ಗಿಟ್ಟಿಸಿ ಕೆಲಸ ಗಟ್ಟಿಯಾದ ಮೇಲೆ ಮನೆಯ ಅಡುಗೆಯವನಾಗಿ ಬಡ್ತಿಯೂ ಸಿಕ್ಕಿತು.ಅದೆ ವೇಳೆ ತಿಪ್ಪ ಜೋಯಿಸರ ಸಂಬಂಧಿಯಾದ ಶೀರ್ನಾಳಿಯ ಐತಾಳರು ತಾಲೂಕಿಗೆ ಮೊದಲ ಕಾರು ಕೊಂಡರು.ಟರ್ಪಾಲ್ ಹೊದೆಸಿದ ಹಡಗಿನಂತ ಫೋರ್ಡ್ ಕಾರಿನ ಜೊತೆ ಅದನ್ನು ನಡೆಸಲೊಬ್ಬ ಗಡ್ಡದ ಸಾಬಿ ಬೇರೆ! ಕೆಲ ಕಾಲ ಅಲ್ಲಿದ್ದು ಡ್ರೈವಿಂಗ್ ಎಂಬ ಆ ಕಾಲದ ವಿಶೇಷ ವಿದ್ಯೆಯನ್ನು ಸ್ಥಳೀಯರೊಬ್ಬರಿಗೆ ಕಲಿಸಿ ಆತ ಅಲ್ಲಿಂದ ಹೊರಡುವ ಕರಾರಾಗಿತ್ತು.ಸೂಕ್ತ ಅಭ್ಯರ್ಥಿಯ ತಲಾಶಿನಲ್ಲಿದ್ದ ಐತಾಳರ ಕಣ್ಣಿಗೆ ಜೋಯಿಸರ ಮನೆಯಲ್ಲಿದ್ದ ನಾರಾಯಣ ಬಿದ್ದ.ಅದೂವರೆಗೂ ಸವಟು ಹಿಡಿದಿದ್ದ ಕೈಗೆ ಹೀಗೆ ಚಕ್ರ ಬಂತು ಹಾಗು ಅದೆ ಮುಂದೆ ಖಾಯಂ ಕೂಡ ಆಯ್ತು.

{ನಾಳೆಗೆ ಮತ್ತೆ ಮುಂದುವರೆಸುವೆ}

No comments: