23 August 2010

ಶಾಲೆಯ ದಿನಗಳು...

{ಮೊನ್ನೆಯಿಂದ ಮುಂದುವರಿಕೆ}








ಸ್ಟ್ಯಾಂಡಿಗೆ ಬಂದ ಕೂಡಲೆ ಬಸ್ ಬಾಗಿಲಲ್ಲಿ ತುಂಬಿ ತುಳುಕುವ ಪ್ರಯಾಣಿಕರ ಧಾವಂತ.ನಮ್ಮ ಕಡೆ ಡ್ರೈವರ್ ಬಾಗಿಲಿನಲ್ಲಿ ನುಗ್ಗೋದು-ಟಾಪ್ ಮೇಲೆ ಕೂತು ಪ್ರಯಾಣಿಸೋದು ಆಗಲೂ ಇರಲಿಲ್ಲ,ಈಗಲೂ ಇಲ್ಲ.ಇದರ ನಡುವೆ ಹರಸಾಹಸ ಮಾಡೋದು ನನ್ನಂತ ಲಗೇಜಿನ ಹಂಗಿಲ್ಲದಿದ್ದ ಎಳೆಯರಿಗೆ ಚಿಟಿಕೆ ಹೊಡೆದಷ್ಟು ಸುಲಭ.ಹೀಗಾಗಿ ನನ್ನ ಸೀಟು ಹಿಡಿಯುವ ಆಸೆಗೆ ಎಂದೂ ಕಲ್ಲು ಬಿದ್ದಿರಲಿಲ್ಲ.ಸಾಗರದ ದಿಕ್ಕಿನಿಂದ ಹೊರಟು ತೀರ್ಥಹಳ್ಳಿಯ ಮೇಲ್ ಬಸ್ ಸ್ಟ್ಯಾಂಡಿಗೆ ಬರುತ್ತಿದ್ದ ಬಸ್ ಒಂದು ಕಿಲೋಮೀಟರ್ ದೂರದ ಮುಖ್ಯ ಬಸ್ ನಿಲ್ದಾಣಕ್ಕೆ ಹೋಗಿ ಬಂದ ಶಾಸ್ತ್ರ ಮಾಡಿ ಪುನಃ ಮಂಗಳೂರಿನತ್ತ ಮುಖ ಮಾಡುತ್ತ ಮೇಲಿನ ಸ್ಟ್ಯಾಂಡಿಗೆ ಬರಬೇಕಲ್ಲ?
ಸಾಗರದಿಂದ ಬಸ್ ಬಂದದ್ದೆ ಇಳಿಯುವವರಿಗೂ ಬಿಡದೆ ಮೊದಲೆ ತೂರಿಕೊಂಡು ಖಾಲಿಯಾದ ಸೀಟೊಂದನ್ನು,ಅದರಲ್ಲೂ ಕಿಟಕಿ ಪಕ್ಕದ ಸೀಟನ್ನೇ ಕಬಳಿಸಿ ಕೂತುಬಿಡುತ್ತಿದ್ದೆ.ಅಮ್ಮ ಕೆಳಗಡೆಯೆ ನಿಂತು ಕಾಯುತ್ತಿರುವಾಗ ಬಸ್ ಊರ ಸವಾರಿಗೆ ಹೊರಟು ಮರಳಿ ಬಂದಲ್ಲಿಗೆ ಮುಟ್ಟುತ್ತಿತ್ತು.ಈ ಹೊತ್ತಿಗೆ ಮಾಡಿರುತ್ತಿದ್ದ ಎರಡು ಕಿಲೋಮೀಟರ್ ಬಿಟ್ಟಿ ಪ್ರಯಾಣ ನನ್ನೊಳಗಿನ ಬಸ್ ಸವಾರಿಯ ತೆವಲನ್ನು ಬಹುಪಾಲು ತೀರಿಸಿರುತ್ತಿತ್ತು.



ಕಾಯುತ್ತಿದ್ದ ಅಮ್ಮನಿಗೆ ಅವರ ಸೀಟ್ ಬಿಟ್ಟು ಕೊಟ್ಟು ಒಲ್ಲದ ಮನಸ್ಸಿನಿಂದ ಕೆಳಗಿಳಿಯುತ್ತಿದ್ದೆ.ಬಸ್ ಹೊರತು ನನ್ನ ದೃಷ್ಟಿಯಿಂದ ಪೂರ್ತಿ ಮರೆಯಾಗುವವರೆಗೂ ಅಲ್ಲಿಯೇ ನಿಂತಿದ್ದು ಅನಂತರವಷ್ಟೇ ಭಾರವಾದ ಹೆಜ್ಜೆ ಎಳೆಯುತ್ತ ಮನೆಯತ್ತ ಹೊರಡುತ್ತಿದ್ದೆ.ನನಗೆ ಅರಿವಿಲ್ಲದೆ ಕಣ್ಣುಗಳೆರಡೂ ತುಂಬಿ ಬಂದು ಮುಂದಿನ ಮಾರ್ಗವೆಲ್ಲ ಮಂಜುಮಂಜಾಗುತ್ತಿದ್ದವು.ಈ ಕಣ್ಣೀರು ಅಮ್ಮ ನನ್ನನ್ನು ಜೊತೆಗೆ ಕರೆದೊಯ್ಯದಿದ್ದುದಕ್ಕೋ? ಇಲ್ಲವೆ ಅವರನ್ನಗಲಿ ಮುಂದಿನ ನಾಲ್ಕಾರು ದಿನ ಇರಬೇಕಿದ್ದುದಕ್ಕೋ ಗೊತ್ತಿರುತ್ತಿರಲಿಲ್ಲ.ಅವರಿಗೂ ಆ ಹೊತ್ತಿನಲ್ಲಿ ಕಣ್ತುಂಬಿ ಬಂದಿರಬಹುದು ಎಂದುಕೊಳ್ಳುತ್ತಿದ್ದೆನಾದರೂ,ತವರಿಗೆ ಹೋಗುವಾಗ ಸಹಜವಾಗಿ ಉಲ್ಲಾಸದಿಂದ ಇರಬಹುದಾಗಿದ್ದ ಅವರ ದೃಷ್ಟಿ ಕೋನದಿಂದ ಯಾವಾಗಲೂ ಯೋಚಿಸಿರಲೇ ಇಲ್ಲ.



ಬಾಳಿನಲ್ಲಿ ಅನೇಕ ಬಾರಿ ತಪ್ಪು ಹೆಜ್ಜೆಗಳನ್ನು ಇಟ್ಟಿದ್ದೇನೆ ಅನ್ನಿಸುತ್ತೆ.ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗಲೆಲ್ಲ ಸೆಟೆದು ನಿಂತಿದ್ದೇನೆ.ಆದರೆ ಘಟನೆಯೊಂದರಲ್ಲಿ ನನ್ನಿಂದಲೆ ಅಚಾತುರ್ಯ ಘಟಿಸಿದ್ದಾಗ ಭಿಡೆಯಿಲ್ಲದೆ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ್ದೇನೆ.ನನ್ನ ಸಹಜ ಸಿದ್ಧ ಸ್ವಭಾವವನ್ನ ನಾನು ಆತ್ಮಾಭಿಮಾನ ಅಂತೇನೆ,ಉಳಿದವರು ದುರಹಂಕಾರ ಅಂತಾರೆ ಇಷ್ಟೇ ವ್ಯತ್ಯಾಸ! ಒಟ್ಟಿನಲ್ಲಿ ಇದ್ದದ್ದನ್ನು ಇದ್ದ ಹಾಗೆ ಹೇಳುತ್ತಾ ನೇರವಾಗಿ ನಡೆಯೋದರಿಂದ ಅನೇಕರ ನಿಷ್ಠೂರ ಕಟ್ಟಿ ಕೊಳ್ಳಬೇಕು ಅನ್ನುವ ಸಂಗತಿ ಮಾತ್ರ ಖಚಿತವಾಗಿದೆ.ನಾನಾ ರೀತಿಯ ಅಯೋಗ್ಯರೆಲ್ಲ ಎತ್ತರದ ಸ್ಥಾನಗಳಿಗೆ ಲಗ್ಗೆ ಹಾಕುವಾಗ ಅಂತಲ್ಲಿಗೆ ತಲುಪುವ ಸಕಲ ಅರ್ಹತೆ ಇದ್ದೂ ನಾನಲ್ಲಿಗೆ ತಲುಪುವಲ್ಲಿ ಎಡವುತಿರೋದು ವಿಷಾದವೆನಿಸಿದರೂ ಜಿಗುಪ್ಸೆಯನ್ನಂತೂ ಹುಟ್ಟಿಸಿಲ್ಲ.ನನ್ನೊಳಗೆ ನಾ ಪ್ರಾಮಾಣಿಕನಾಗಿರುವ ಭರವಸೆ ಕೈ ಬಿಡದ ತನಕ ಅಯೋಗ್ಯರ socalled ಉನ್ನತಿ ನನ್ನನ್ನು ಹತಾಶನನ್ನಾಗಿಸಿಲ್ಲ thank god i didn't become cinic!

ಸಂಬಂಧಗಳ ವಿಚಾರಗಳಲ್ಲೂ ನನ್ನ ಧೋರಣೆ ನೇರ.ಹಾಗೆ ನೋಡಿದರೆ ತೀರ್ಥಹಳ್ಳಿಯ ದಿನಗಳಿಂದಲೂ ನಾನು ಬಹುಪಾಲು ಒಬ್ಬಂಟಿ.ಶಾಲೆಯಲ್ಲೂ ನನಗೆ ಹೆಚ್ಚು ಗೆಳೆಯರಿರಲಿಲ್ಲ.ಆಗೆಲ್ಲ ಕೀಳರಿಮೆಯ ಕೂಪದಲ್ಲಿದ್ದುದೆ ಅದಕ್ಕೆ ಕಾರಣ.ನನ್ನ ಸಹಪಾಟಿಗಳೆಲ್ಲ ತಕ್ಕ ಮಟ್ಟಿನ ಸ್ಥಿತಿವಂತರೆ,ನನ್ನದೋ ಕುಚೇಲನಿಗೆ ಹತ್ತಿರದ ನೆಂಟಸ್ತನ.ಇತ್ತ ನನ್ನ ಹೆತ್ತಮ್ಮನದೊಂದು ದ್ವಿಮುಖ ವ್ಯಕ್ತಿತ್ವ.ತನ್ನ ನಿರೀಕ್ಷೆ-ಅಗಾಧವಾಗಿದ್ದ ಬಾಳಿನ ಕನಸುಗಳನ್ನೆಲ್ಲ ಮಣ್ಣು ಪಾಲಾಗಿಸಿದ್ದ ನಾನು ಕೂತಲ್ಲಿ ನಿಂತಲ್ಲಿ ತಪ್ಪು ಕಂಡು ಹಿಡಿದು ಭೀಕರವಾಗಿ ಶಿಕ್ಷಿಸುತ್ತಿದ್ದಳು.ಬಿಸಿ ಇಸ್ತ್ರಿ ಪೆಟ್ಟಿಗೆಯಿಂದ ಸುಡುವುದು,ವಿದ್ಯುತ್ ಸ್ಟವ್ ಬಿಸಿ ಮಾಡಿ ಬಲವಂತವಾಗಿ ಕೈಯಿಂದ ಮುಟ್ಟಿಸುವುದು,ಬ್ಯಾಡಗಿ ಮೆಣಸಿನ ಹೊಗೆ ಹಾಕುವುದು,ದನ ಕಟ್ಟುವ ಹಗ್ಗದಲ್ಲಿ ಕೈ ಹಿಂದೆ ಬಿಗಿದು-ಕಾಲು ಕಟ್ಟಿ ಕೋಣೆಯಲ್ಲಿ ಕೂಡಿ ಹಾಕೊದು ಇಂತಹ ಪೈಶಾಚಿಕ ಶಿಕ್ಷೆಗಳನ್ನೆಲ್ಲ ಇನ್ನೂ ವಯಸ್ಸು ಆರು ಮುಟ್ಟುವ ಮೊದಲೆ ಅನುಭವಿಸಿದ್ದೆ.ಕೈಗೆ ಸಿಕ್ಕ ಮಣೆ-ಕೋಲು-ಹಗ್ಗಗಳಲ್ಲಿ ಹೊಡೆಸಿ ಕೊಂಡದ್ದು ಇವುಗಳ ಮುಂದೆ ಏನೇನೂ ಅಲ್ಲ.ಅದು ಅವರ ಒಂದು ಮುಖವಾದರೆ ಸಾಮಾಜಿಕವಾಗಿ ಹೊರಗಡೆ ನಾನು ಅತಿ ಕಟ್ಟುನಿಟ್ಟಿನಿಂದ ಬೆಳೆದ ಶಿಸ್ತಿನ ಹುಡುಗ ಎಂದು ಬಿಂಬಿಸುವ ತೆವಲು! ಓದಿನಲ್ಲೂ ಪ್ರತಿಷ್ಠಿತ ಶಾಲೆಯಲ್ಲೇ ಓದಿಸಬೇಕೆಂಬ ಹುಚ್ಚು ಹಂಬಲ.ಆಗ ತೀರ್ಥಹಳ್ಳಿಯ ಮಟ್ಟಿಗೆ ಇದ್ದುದು ಎರಡೆ ಎರಡು ಖಾಸಗಿ ಶಾಲೆಗಳು.ಪರೀಕ್ಷೆಯ ಫಲಿತಾಂಶದಿಂದ ಹಿಡಿದು ಕ್ರೀಡಾಕೂಟ ಇನ್ನಿತರ ಚಟುವಟಿಕೆ ಹಾಗು ನವೊದಯಕ್ಕೆ ಆಯ್ಕೆಗಳಂತಹ ಸಣ್ಣ ಸಣ್ಣ ವಿಷಯಗಳಲ್ಲೂ ರಾಷ್ಟ್ರೋತ್ಥಾನ ಪರಿಷತ್ ನ ಅಂಗಸಂಸ್ಥೆ 'ಸೇವಾ ಭಾರತಿ" ಹಾಗು ಕ್ಯಾಥೊಲಿಕ್ ಮಹಾಸಭಾದ ಅಂಗಸಂಸ್ಥೆ 'ಸೆಯಿಂಟ್ ಮೇರಿಸ್' ಶಾಲೆಗಳ ನಡುವೆ ಭಾರೀ ಪೈಪೋಟಿ.ನನ್ನನ್ನು ಸೇವಾಭಾರತಿಯ ಶಿಶು ಮಂದಿರ 'ಭಾರತಿ ಶಿಶುವಿಹಾರಕ್ಕೆ ಸೇರಿಸಲಾಗಿತ್ತು.ಅದಾಗಲೇ ನಾನು ಮನೆಯ ಹತ್ತಿರವೇ ಪುರಸಭೆಯವರು ನಡೆಸುತ್ತಿದ್ದ ರೋಟರಿ ಶಿಶುವಿಹಾರದಲ್ಲಿ ತಕ್ಕ ಮಟ್ಟಿಗೆ ಆಡಲು ಹಾಡಲು ಕಲಿತಿದ್ದೆ.


{ನಾಳೆಗೆ ಮುಂದುವರಿಸುತ್ತೇನೆ}

No comments: